ಅಂಕೋಲಾ, ಆಗಸ್ಟ್ 31, 2025: ಬೆಂಗಳೂರಿನ ಸಿಐಡಿ ವಿಭಾಗದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾಗಿ (ಎಸಿಪಿ) ಸೇವೆ ಸಲ್ಲಿಸುತ್ತಿರುವ ಅಂಕೋಲಾದ ಹೆಮ್ಮೆಯ ಪುತ್ರಿ ಅಂಜುಮಲಾ ತಿಮ್ಮಣ್ಣ ನಾಯಕ ಅವರಿಗೆ ರಾಷ್ಟ್ರಪತಿಗಳ ಪೊಲೀಸ್ ಶ್ಲಾಘನೀಯ ಸೇವಾ ಪದಕವನ್ನು ಇತ್ತೀಚೆಗೆ ನೀಡಿ ಗೌರವಿಸಲಾಯಿತು. ಬೆಂಗಳೂರಿನ ರಾಜಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ ಗೆಹೋಟ್ ಅವರು ಈ ಪದಕವನ್ನು ಪ್ರದಾನ ಮಾಡಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಮಂತ್ರಿ ಡಾ. ಜಿ. ಪರಮೇಶ್ವರ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಅಂಕೋಲಾ ತಾಲೂಕಿನ ಶಿರಗುಂಜಿ ಗ್ರಾಮದ ನಿವೃತ್ತ ಶಿಕ್ಷಕ ತಿಮ್ಮಣ್ಣ ಬೊಮ್ಮಯ್ಯ ನಾಯಕ ಮತ್ತು ಶಾಂತಿ ನಾಯಕ ಅವರ ಪುತ್ರಿಯಾದ ಅಂಜುಮಲಾ ನಾಯಕ, ತಮ್ಮ ದಕ್ಷ ಮತ್ತು ಶ್ಲಾಘನೀಯ ಸೇವೆಯ ಮೂಲಕ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಸಾಧನೆಯು ಅಂಕೋಲಾ ಮಾತ್ರವಲ್ಲ, ಇಡೀ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಕ್ಷಣವಾಗಿದೆ.