ಅಂಕೋಲಾ, ಸೆಪ್ಟೆಂಬರ್ 18, 2025: ಅಂಕೋಲಾ ತಾಲೂಕಿನ ಅಡ್ಲೂರ್ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಟ್ಯಾಂಕರ್ ಲಾರಿ ನಡುವೆ ಭೀಕರ ಡಿಕ್ಕಿ ಸಂಭವಿಸಿ, ಟ್ಯಾಂಕರ್ ಚಾಲಕ ಮುದ್ದೇಬಿಹಾಳ ನಿವಾಸಿ ಶರಣಪ್ಪ ಎಸ್. ಮತ್ತು ಬಸ್ ಪ್ರಯಾಣಿಕ ಕೇಣಿಯ ಭಾಸ್ಕರ್ ಗಾಂವಕರ್ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ಚಾಲಕ ಅವರ್ಸ್ ದಂಡೇಭಾಗ ನಿವಾಸಿ ರತ್ನಾಕರ್ ನಾಯ್ಕ್ ಸೇರಿ ಸುಮಾರು 9 ಜನ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆ ಕಾರವಾರಕ್ಕೆ ಸ್ಥಳಾಂತರಿಸಲಾಗಿದ್ದು, ರಕ್ಷಣಾ ಕಾರ್ಯ ಜಾರಿಯಲ್ಲಿದೆ.
ಮಕ್ಕಿಗದ್ದೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ (KA 31 F 1247) ಅಡ್ಲೂರಿನ ತರಂಗ್ ಹೋಟೆಲ್ ಎದುರಿನಲ್ಲಿ ಯಲ್ಲಾಪುರ ಕಡೆ ಸಾಗುತ್ತಿದ್ದ ಟ್ಯಾಂಕರ್ ಲಾರಿ (KA 29 C 2998)ನೊಂದಿಗೆ ಜೋರಾಗಿ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಬಸ್ ಪಲ್ಟಿ ಬಿದ್ದು ಸಂಪೂರ್ಣ ಜಜ್ಜಿ ನುಜ್ಜು ಗುಜ್ಜಾಗಿ ಗುಜರಿಯಂತೆ ಕಂಡುಬಂದಿದ್ದು, ಟ್ಯಾಂಕರ್ ಚಾಲಕ ಶರಣಪ್ಪ ಎಸ್. ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಕೇಣಿಯ ಭಾಸ್ಕರ್ ಗಾಂವಕರ್ ಸಹ ಮೃತರಾಗಿದ್ದಾರೆ.

ಬಸ್ ಚಾಲಕ ರತ್ನಾಕರ್ ನಾಯ್ಕ್ ಅವರ್ಸ್ಗೆ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಇತರ ಗಾಯಾಳುಗಳಾದ ಮಕ್ಕಿಗದ್ದೆ ಶಾಲಾ ಶಿಕ್ಷಕಿ ವೀಣಾ ವೆಂಕಟರಮಣ, ಪ್ರಜ್ಞಾ ಪ್ರದೀಪ್ ನಾಯ್ಕ ಅಲಗೇರಿ, ಪ್ರಜ್ಞಾ ಮಗಳು ಸಾನ್ವಿ, ಸಾವಿತ್ರಿ ದಾಕು ಗೌಡ ಒಕ್ಕಲ್ ಬೆಳಸೆ, ರಕ್ಷಾ ರಾಘವೇಂದ್ರ ಬಾನಾವಳಿ ಅವರ್ಸ್, ಬಸ್ ನಿರ್ವಾಹಕ ಚಂದ್ರಹಾಸ್ ನಾರಾಯಣ ನಾಯ್ಕ ಕೋಡ್ಕಣಿ, ಶ್ರೀಧರ್ ಈಶ್ವರ್ ಹರಿಕಂತ್ರ ಬಳಲೆ, ರಾಧಾಕೃಷ್ಣ ಮಹಾಬಲೇಶ್ವರ್ ನಾಯ್ಕ ಮಕ್ಕಿಗದ್ದೆಯವರನ್ನು ಅಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಒಬ್ಬ ಪ್ರಯಾಣಿಕ ಖಾಸಗಿ ವಾಹನದ ಮೂಲಕ ನೇರವಾಗಿ ಜಿಲ್ಲಾ ಆಸ್ಪತ್ರೆ ಕಾರವಾರಕ್ಕೆ ತೆರಳಿದ್ದಾರೆ.
ಅಂಕೋಲಾ, ರಾಮನಗುಳಿ, ಗೋಕರ್ಣ, ಗುಳ್ಳಾಪುರದ ಅಂಬುಲೆನ್ಸ್ಗಳನ್ನು ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದ್ದು, ಪೊಲೀಸ್ ಸಿಬ್ಬಂದಿ ಹೆದ್ದಾರಿಯಲ್ಲಿ ಸಂಚಾರವನ್ನು ನಿಯಂತ್ರಿಸಿ ಇತರ ವಾಹನಗಳ ಸುಗಮತೆಗೆ ಅನುವು ಮಾಡಿದ್ದಾರೆ. ಕ್ರೇನ್ ಮೂಲಕ ಎರಡೂ ವಾಹನಗಳನ್ನು ಹೆದ್ದಾರಿ ಅಂಚಿಗೆ ಎಳೆದೊಯ್ಯಲಾಗಿದ್ದು, ಘಟನಾಸ್ಥಳದಿಂದ ತಾಲೂಕು ಆಸ್ಪತ್ರೆ ಶವಾಗಾರಕ್ಕೆ ಮೃತ ದೇಹಗಳನ್ನು ಸಾಗಿಸಲು ಸಾಮಾಜಿಕ ಕಾರ್ಯಕರ್ತರಾದ ಕನಸಿ ಗದ್ದೆಯ ವಿಜಯ್ಕುಮಾರ್ ನಾಯ್ಕ್, ಬೊಮ್ಮಯ್ಯ ನಾಯ್ಕ ಸಹಕರಿಸಿದ್ದಾರೆ. ಗಣಪತಿ ನಾಯ್ಕ್ ಮೂಲೆಮನೆ, ಮಂಜುನಾಯ್ಕ ಸೇರಿದಂತೆ ಸುತ್ತಮುತ್ತಲ ನಾಗರಿಕರು ಮಾನವೀಯ ಸಹಕಾರ ನೀಡಿದ್ದಾರೆ.

ಶರಾವತಿ ಪಂಪ್ ಸ್ಟೋರೇಜ್ ಯೋಜನೆಯ ಆಲಿಕೆ ಸಭೆಗೆ ತೆರಳಿದ್ದ ಜಿಲ್ಲಾ ಪೊಲೀಸ್ ಅಧಿಕ್ಷಕ ದೀಪನ್ ಎಂ.ಎನ್. ಅಪಘಾತ ಮಾಹಿತಿ ತಿಳಿದು ಕೂಡಲೇ ಗೇರುಸೊಪ್ಪೆಯಿಂದ ಹೊರಟು ಅಂಕೋಲಾ ತಾಲೂಕು ಆಸ್ಪತ್ರೆ ಮತ್ತು ಘಟನಾಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಿಪಿಐ ಚಂದ್ರಶೇಖರ್ ಮಠಪತಿ ಹಿರಿಯ ಅಧಿಕಾರಿಗಳೊಂದಿಗೆ ಕರ್ತವ್ಯ ನಿರ್ವಹಿಸಿದ್ದಾರೆ. ಅಂಕೋಲಾ ಸಾರಿಗೆ ಘಟಕದ ಅಧಿಕಾರಿ ಶಿವಾನಂದ ಸಹ ಸ್ಥಳ ಪರಿಶೀಲಿಸಿದ್ದಾರೆ.

ಪಿಎಸ್ಐ ಗುರುನಾಥ್ ಹಾದಿಮನಿ ಮತ್ತು ಸುನಿಲ್ ಹುಲ್ಲೊಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ. ಹೆದ್ದಾರಿ ಗಸ್ತು ವಾಹನದ ಎಎಸ್ಐ ದೇವಿದಾಸ, ಸಿಬ್ಬಂದಿ ಉಮೇಶ್, 112 ತುರ್ತು ಸೇವೆ ಸಿಬ್ಬಂದಿ, ಹೋಂ ಗಾರ್ಡ್ಗಳು ಕರ್ತವ್ಯ ನಿರ್ವಹಿಸಿದ್ದಾರೆ.