ಕೊಲ್ಲೂರು, ಆಗಸ್ಟ್ 30, 2025: ಕೊಲ್ಲೂರು ಸೌರ್ಪಣಿಕಾ ನದಿಯಲ್ಲಿ ಕಾಲುಜಾರಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ವಸುಧಾ ಚಕ್ರವರ್ತಿ (46) ಅವರ ಮೃತದೇಹ ಇಂದು ಮಾವಿನಕಾರು ಬಳಿ ಹೊಳೆಯಲ್ಲಿ ಪತ್ತೆಯಾಗಿದೆ.
ಬೆಂಗಳೂರು ತ್ಯಾಗರಾಜನಗರ ನಿವಾಸಿಯಾದ ವಸುಧಾ ಅವರು ಆಗಾಗ್ಗೆ ಕೊಲ್ಲೂರು ದೇವಳಕ್ಕೆ ಭೇಟಿ ನೀಡುತ್ತಿದ್ದು, ಆಗಸ್ಟ್ 27ರಂದು ದೇವಸ್ಥಾನಕ್ಕೆ ಆಗಮಿಸಿದ ವೇಳೆ ನದಿಯಲ್ಲಿ ಜಾರಿ ಬಿದ್ದು ಕಾಣೆಯಾಗಿದ್ದರು. ತಕ್ಷಣವೇ ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ಹಾಗೂ ಅಗ್ನಿಶಾಮಕ ದಳವು ಹುಡುಕಾಟ ನಡೆಸಿದರೂ, ನೀರಿನ ರಭಸ ಹೆಚ್ಚಿದ್ದರಿಂದ ಪತ್ತೆಯಾಗಿರಲಿಲ್ಲ.

ಎರಡು ದಿನಗಳಿಂದ ನಡೆದ ಹುಡುಕಾಟದ ನಂತರ, ಇಂದು ಬೆಳಿಗ್ಗೆ ಮೃತದೇಹ ಮಾವಿನಕಾರು ಬಳಿ ಪತ್ತೆಯಾಗಿದೆ. ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಈಶ್ವರ ಮಲ್ಪೆ ಹಾಗೂ ಸ್ಥಳೀಯ ಪ್ರದೀಪ್ ಭಟ್ ಸಂಪ್ರೆ ಮೊದಲಾದವರು ಹುಡುಕಾಟದಲ್ಲಿ ಭಾಗವಹಿಸಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.