ಭಟ್ಕಳ, ಸೆಪ್ಟೆಂಬರ್ 17, 2025: ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ಹೆಬಳೆ ಗ್ರಾಮದ ಶ್ರೀ ಅರಿಕಲ್ ಜಟಕೇಶ್ವರ ದೇವಸ್ಥಾನದ ಹುಂಡಿಯನ್ನು ಒಡೆದು ಕಳ್ಳತನ ಮಾಡಿದ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಂದ ಎರಡು ಬೈಕ್ಗಳನ್ನು ಒಳಗೊಂಡಂತೆ ರೂ.2,21,295 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೆಪ್ಟೆಂಬರ್ 14, 2025ರ ಮಧ್ಯರಾತ್ರಿಯ ಸಮಯದಲ್ಲಿ ದೇವಸ್ಥಾನದ ಹುಂಡಿಯನ್ನು ಒಡೆದು ಒಳಗಿರುವ ಹಣವನ್ನು ಕದ್ದ ಘಟನೆಯ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 125/2025ರಡಿಯಲ್ಲಿ ಕಲಂ 500, 331(4), 305(2) BNS ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ತನಿಖೆಯಲ್ಲಿ A-1 ಆರೋಪಿಯಾದ ಅಮೀರ್ (ತಂದೆ: ಹಸನ್ ಬ್ಯಾರಿ, ಶಿರಾಲಿ ವಾಸಿ) ಮತ್ತು A-2 ಆರೋಪಿಯಾದ ಮಹ್ಮದ್ ಇಮ್ರಾನ್ (ತಂದೆ: ಅಬ್ದುಲ್ ಗಫಾರ್, ಭಟ್ಕಳ ವಾಸಿ) ಗುರುತಿಸಲ್ಪಟ್ಟಿದ್ದಾರೆ. ಇವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳ್ಳತನಕ್ಕೆ ಬಳಸಿದ ಎರಡು ಬೈಕ್ಗಳ ಸೇರಿದಂತೆ ರೂ.2,21,295 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.