ಕಾರವಾರ, ಆಗಸ್ಟ್ 31, 2025: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಗ್ರಾಮದಲ್ಲಿ ಊಟ ಮಾಡುವಾಗ ಗಂಟಲಲ್ಲಿ ಅನ್ನ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಮೃತ ಯುವಕನನ್ನು ಅಮಿತ್ ಮಾಳಸೇರ್ (38) ಎಂದು ಗುರುತಿಸಲಾಗಿದೆ. ಭಾನುವಾರ ಮನೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಅಮಿತ್ರ ಗಂಟಲಲ್ಲಿ ಅನ್ನದ ಅಗಳೊಂದು ಸಿಲುಕಿತ್ತು. ಕೂಡಲೇ ಮನೆಯವರು ಆತನಿಗೆ ನೀರು ಕುಡಿಸಿದ್ದರೂ, ಅಮಿತ್ ಕುಸಿದು ಬಿದ್ದಿದ್ದಾನೆ.
ತಕ್ಷಣವೇ ಆತನನ್ನು ಅಂಬುಲೆನ್ಸ್ ಮೂಲಕ ಕಾರವಾರದ ಕ್ರಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ವೈದ್ಯರು ಪರೀಕ್ಷಿಸಿದಾಗ ಗಂಟಲಲ್ಲಿ ಅನ್ನ ಸಿಲುಕಿರುವುದರಿಂದ ಅಮಿತ್ ಈಗಾಗಲೇ ಮೃತಪಟ್ಟಿರುವುದು ದೃಢವಾಯಿತು.
ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಅಮಿತ್, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದ ಎಂದು ತಿಳಿದುಬಂದಿದೆ.