ಕುಂದಾಪುರ, ಸೆ.14, 2025: ಕಮಲಶಿಲೆ ಸಮೀಪದ ತಾರೆಕೊಡ್ಲು ಬಳಿ ಶನಿವಾರ (ಸೆ.13, 2025) ಮಧ್ಯಾಹ್ನ ಚಲಿಸುತ್ತಿದ್ದ ಬೈಕ್ ಮೇಲೆ ದೊಡ್ಡ ಕಡವೆಯೊಂದು ಏಕಾಏಕಿ ಹಾರಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ದುರ್ಘಟನೆ ಸಂಭವಿಸಿದೆ.
ಮೃತಪಟ್ಟವರು ಕಾವ್ರಾಡಿ ಗ್ರಾಮದ ನೆಲ್ಲಿಕಟ್ಟೆಯ ಶ್ರೇಯಸ್ ಮೊಗವೀರ (22). ಗಂಭೀರವಾಗಿ ಗಾಯಗೊಂಡ ಸಹಸವಾರ ಪಡುವಾಲೂರು ನಿವಾಸಿ ವಿಘ್ನೇಶ್ (19) ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ನೇಹಿತರಾಗಿದ್ದ ಶ್ರೇಯಸ್ ಮತ್ತು ವಿಘ್ನೇಶ್ ಕಮಲಶಿಲೆ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ತಾರೆಕೊಡ್ಲು ಬಳಿ ಕಡವೆಯೊಂದು ರಸ್ತೆಗೆ ದಾಟಿದ್ದು, ಬೈಕ್ ಢಿಕ್ಕಿಯಾಗಿ ಪಲ್ಟಿಯಾಗಿದೆ. ಕಡವೆಯ ಕೊಂಬುಗಳು ಶ್ರೇಯಸ್ನ ದೇಹಕ್ಕೆ ನುಗ್ಗಿ ತೀವ್ರ ರಕ್ತಸ್ರಾವವಾದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು, ಕಡವೆಯೂ ಸಾವನ್ನಪ್ಪಿದೆ. ಶ್ರೇಯಸ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದರು.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. “ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ,” ಎಂದು ಶಂಕರನಾರಾಯಣ ಪೊಲೀಸರು ತಿಳಿಸಿದ್ದಾರೆ.