ಕಾರವಾರ, ಆಗಸ್ಟ್ 18, 2025: ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು, ರವರ ಮುನ್ಸೂಚನೆಯಂತೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಆಗಸ್ಟ್ 20ರ ಬೆಳಗ್ಗೆ 8:30 ಗಂಟೆಯವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಏರುತ್ತಿದೆ.
ಜಲಾಶಯದ ಗರಿಷ್ಠ ಮಟ್ಟ 1819.00 ಅಡಿಗಳಾಗಿದ್ದು, ಆಗಸ್ಟ್ 18, 2025ರ ಮಧ್ಯಾಹ್ನ 1:00 ಗಂಟೆಗೆ ನೀರಿನ ಮಟ್ಟ 1815.50 ಅಡಿಗಳಿಗೆ ತಲುಪಿದೆ. ಈ ದಿನ ಒಳಹರಿವು 59,891 ಕ್ಯೂಸೆಕ್ಸ್ಗಿಂತಲೂ ಅಧಿಕವಾಗಿದ್ದು, ಈ ರೀತಿಯಾಗಿ ಮುಂದುವರಿದರೆ ಜಲಾಶಯ ಶೀಘ್ರದಲ್ಲಿ ಗರಿಷ್ಠ ಮಟ್ಟ ತಲುಪಲಿದೆ. ಆದ್ದರಿಂದ, ಅಣೆಕಟ್ಟೆಯ ಸುರಕ್ಷತೆಗಾಗಿ, ಆಗಸ್ಟ್ 19, 2025ರ ಬೆಳಗ್ಗೆ 10:00 ಗಂಟೆಯಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗುವುದೆಂದು ಕೆಪಿಸಿಎಲ್ ಲಿಂಗನಮಕ್ಕಿ ಜಲಾಶಯದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಶರಾವತಿ ನದಿಯ ತಗ್ಗು ಪ್ರದೇಶಗಳಾದ ಹೊನ್ನಾವರ ತಾಲೂಕಿನ ತಳಮಟ್ಟದ ಗ್ರಾಮಗಳ ಜನರು ಎಚ್ಚರಿಕೆಯಿಂದಿರಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಕೆ. ಲಕ್ಷ್ಮಿಪ್ರಿಯಾ ಸೂಚಿಸಿದ್ದಾರೆ. ಪ್ರವಾಹ ಸಂಭವನೀಯ ಸ್ಥಳಗಳ ಸಾರ್ವಜನಿಕರು ಅಮೂಲ್ಯ ವಸ್ತುಗಳೊಂದಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯಬೇಕು. ಮೀನುಗಾರರು, ಪ್ರವಾಸಿಗರು, ಮತ್ತು ಸಾರ್ವಜನಿಕರು ಶರಾವತಿ ನದಿ ಒಳಗೆ ಅಥವಾ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳದಂತೆ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ತುರ್ತು ಸಹಾಯಕ್ಕಾಗಿ:

- 24×7 ಕಂಟ್ರೋಲ್ ರೂಮ್ ಟೋಲ್ ಫ್ರೀ ಸಂಖ್ಯೆ: 08382-229857
- ವಾಟ್ಸಾಪ್ ಸಂಖ್ಯೆ: 9483511015