ಮಂಗಳೂರು, ಸೆಪ್ಟೆಂಬರ್ 20, 2025: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 55 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಒಂದು ವಂಚನೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಂಧನವು ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಪ್ರಕರಣಗಳಲ್ಲಿ ಅತ್ಯಂತ ಹಳೆಯದ್ದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಕ್ರೈಂ ನಂ. 32/1970ರಲ್ಲಿ ದಾಖಲಾದ ವಂಚನೆ ಪ್ರಕರಣದ ಆರೋಪಿಯಾಗಿದ್ದ ಕೇರಳದ ಮಲಪ್ಪುರಂ ಜಿಲ್ಲೆಯ ನಿವಾಸಿ, ಪ್ರಸ್ತುತ 78 ವರ್ಷದ ಚಂದ್ರನ್ ಅವರು 55 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಅವರ ವಿರುದ್ಧ ಎಲ್ಪಿಸಿ (LPC: 2/1972) ವಾರಂಟ್ ಜಾರಿಯಾಗಿತ್ತು. ಪೊಲೀಸರ ನಿರಂತರ ಶೋಧ ಕಾರ್ಯಾಚರಣೆಯ ನಂತರ, ಕೇರಳದ ಕ್ಯಾಲಿಕಟ್ನ ಪುಲ್ಲಿಕಲ್ನಲ್ಲಿ ತಲೆಮರೆಸಿಕೊಂಡಿದ್ದ ಚಂದ್ರನ್ ಅವರನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇಷ್ಟು ಹಳೆಯ ಪ್ರಕರಣವನ್ನು ಭೇದಿಸಿದ್ದು ಅಪೂರ್ವ ಘಟನೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಮಾಹಿತಿಗಳನ್ನು ಆಧರಿಸಿ ಮತ್ತು ತಾಂತ್ರಿಕ ನೆರವು ಪಡೆದು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಕಾರ್ಯವನ್ನು ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದಾರೆ.