ಉಡುಪಿ, ಸೆಪ್ಟೆಂಬರ್ 03, 2025: ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕಿಕಟ್ಟೆಯ ಸುಬ್ರಹ್ಮಣ್ಯ ನಗರದಲ್ಲಿ ಸೆಪ್ಟೆಂಬರ್ 2, 2025ರ ತಡರಾತ್ರಿ 1 ಗಂಟೆ ಸುಮಾರಿಗೆ ಮೂವರು ಮುಸುಕುಧಾರಿ ಕಳ್ಳರ ತಂಡವು ಮನೆಗಳಿಗೆ ನುಗ್ಗಿ ಕಳವಿಗೆ ಯತ್ನಿಸಿರುವ ಘಟನೆ ನಡೆದಿದೆ. ಈ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಳ್ಳರ ತಂಡವು ಮೊದಲಿಗೆ ವಿಠಲ ಪೂಜಾರಿ ಎಂಬವರ ಮನೆಗೆ ನುಗ್ಗಿ, ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಸೊತ್ತಿಗಾಗಿ ಹುಡುಕಾಟ ನಡೆಸಿತು. ಆದರೆ, ಯಾವುದೇ ಬೆಲೆಬಾಳುವ ವಸ್ತುಗಳು ಸಿಗದ ಕಾರಣ ಕಳ್ಳರು ಅಲ್ಲಿಂದ ತೆರಳಿದ್ದಾರೆ. ನಂತರ, ಸಮೀಪದ ಇನ್ನೊಂದು ಮನೆಗೆ ನುಗ್ಗಲು ಯತ್ನಿಸಿದಾಗ, ಮನೆಯವರು ಎಚ್ಚರಗೊಂಡು ದೀಪ ಹಾಕಿದ್ದರಿಂದ ಕಳ್ಳರು ಪರಾರಿಯಾಗಿದ್ದಾರೆ. ಪರಿಸರದ ಸಿಸಿಟಿವಿಯೊಂದರಲ್ಲಿ ಕಳ್ಳರು ರಸ್ತೆಯಲ್ಲಿ ಮನೆಗಳನ್ನು ಗುರುತಿಸಿಕೊಂಡು ಸಂಚರಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಘಟನೆಯ ಮಾಹಿತಿ ತಿಳಿದು ಉಡುಪಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಕಳ್ಳರನ್ನು ಗುರುತಿಸಲು ತನಿಖೆ ಆರಂಭಿಸಲಾಗಿದೆ.