ಉಡುಪಿ: ದಲಿತ ಯುವಕನ ಗುಂಡಿನ ದಾಳಿ ಹತ್ಯೆ ಪ್ರಕರಣದಲ್ಲಿ ಬೇರೆ ಆಯಾಮಗಳಲ್ಲಿ ತನಿಖೆ; ಎಸ್‌ಪಿ ಹರಿರಾಮ್ ಶಂಕರ್ ಭರವಸೆ

ಉಡುಪಿ: ಹನೇಹಳ್ಳಿ ದಲಿತ ಹತ್ಯೆ ಪ್ರಕರಣದಲ್ಲಿ ಭೂವಿವಾದ ಸೇರಿ ಬೇರೆ ಆಯಾಮಗಳಲ್ಲಿ ತನಿಖೆ ಎಂದ ಎಸ್‌ಪಿ ಹರಿರಾಮ್ ಶಂಕರ್. 700 ಜನರ ವಿಚಾರಣೆ, ಮುಂಬೈ-ಕೇರಳ ತನಿಖೆ ನಡೆದಿದ್ದು, ಸಿಬಿಐಗೆ ನೀಡುವಂತೆ ಮನವಿ ಪರಿಗಣಿಸುತ್ತೇವೆ. ದೇವಸ್ಥಾನ ಉದ್ಯೋಗ, ದಲಿತ ಜಾಗ ವಂಚನೆ, ಫೈನಾನ್ಸ್ ಮೋಸ, ಗಾಂಧಿ ಭವನ ಅಭಿವೃದ್ಧಿ, ವಿದ್ಯಾರ್ಥಿ ಸುರಕ್ಷತೆಯ ಬಗ್ಗೆ ಅಹವಾಲುಗಳು.

ಉಡುಪಿ: ದಲಿತ ಯುವಕನ ಗುಂಡಿನ ದಾಳಿ ಹತ್ಯೆ ಪ್ರಕರಣದಲ್ಲಿ ಬೇರೆ ಆಯಾಮಗಳಲ್ಲಿ ತನಿಖೆ; ಎಸ್‌ಪಿ ಹರಿರಾಮ್ ಶಂಕರ್ ಭರವಸೆ

ಉಡುಪಿ, ಸೆಪ್ಟೆಂಬರ್ 20, 2025: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹನೇಹಳ್ಳಿ ಗ್ರಾಮದ ಬಾಳೆಹಿತ್ಲು ಮೂಡುತೋಟದಲ್ಲಿ ದಲಿತ ಕೂಲಿ ಕಾರ್ಮಿಕ ಕೃಷ್ಣ ಅವರನ್ನು ಗುಂಡಿಕ್ಕಿ ಹತ್ಯೆಗೊಳಿಸಿದ ಪ್ರಕರಣದಲ್ಲಿ ಈಗಾಗಲೇ ನಡೆದ ತನಿಖೆಯಲ್ಲಿ ಸುಳಿವು ಲಭ್ಯವಾಗದ ಕಾರಣ, ಭೂವಿವಾದ ಸೇರಿದಂತೆ ಬೇರೆ ಆಯಾಮಗಳಲ್ಲಿ ತನಿಖೆಯನ್ನು ತೀವ್ರಗೊಳಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಭರವಸೆ ನೀಡಿದ್ದಾರೆ.

ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂಡುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಈ ಪ್ರಕರಣದ ಮೊದಲ ಹಂತದ ತನಿಖೆಯಲ್ಲಿ 700ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ತಾಂತ್ರಿಕ ಪರಿಶೀಲನೆ, ಮುಂಬೈ ಮತ್ತು ಕೇರಳಕ್ಕೆ ತನಿಖಾ ತಂಡ ತೆರಳಿ ಪರಿಶೀಲನೆ ನಡೆಸಲಾಗಿತ್ತು. ನಾನು ಬಂದ ನಂತರ ನಾಲ್ಕು ಬಾರಿ ಬ್ರಹ್ಮಾವರ ಠಾಣೆಗೆ ಭೇಟಿ ನೀಡಿ ಚರ್ಚಿಸಿದ್ದೇನೆ. ಘಟನಾ ಸ್ಥಳಕ್ಕೂ ಭೇಟಿ ನೀಡಿದ್ದೇನೆ. ಈಗ ಗಂಭೀರವಾಗಿ ಪರಿಗಣಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.

ಸಮತಾ ಸೈನಿಕ ದಳದ ಮುಖಂಡ ವಿಶ್ವನಾಥ ಪೇತ್ರಿ ಈ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಿ, “ಪ್ರಾಮಾಣಿಕ ತನಿಖೆಯಿಂದ ಸುಳಿವು ಲಭ್ಯವಾಗದ ಕಾರಣ ಸಿಬಿಐ ತನಿಖೆಗೆ ನೀಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಯಾವ ಕ್ರಮ?” ಎಂದು ಪ್ರಶ್ನಿಸಿದ್ದರು.

ದೇವಸ್ಥಾನಗಳಲ್ಲಿ ದಲಿತರ ಉದ್ಯೋಗ ಕಸಿಯುವಂತಿಲ್ಲ

ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯೂರು ಮತ್ತು ದಲಿತ ಮುಖಂಡ ರಮೇಶ್ ಕೋಟ್ಯಾನ್, “ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ದಲಿತರಿಗೆ ಮೀಸಲಾದ ಉದ್ಯೋಗಗಳನ್ನು ದಲಿತರಿಗೆ ನೀಡುತ್ತಿಲ್ಲ. ಇದರಿಂದ ದಲಿತರ ಉದ್ಯೋಗ ಕಸಿಯಲ್ಪಡುತ್ತಿದೆ. ದೂರು ನೀಡಿದರೂ ಕ್ರಮ ಇಲ್ಲ” ಎಂದು ದೂರಿದರು. ಎಸ್‌ಪಿ, “ಈ ವಿಷಯವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.

ಹಿರಿಯಡ್ಕದಲ್ಲಿ ದಲಿತರ ಜಾಗ ವಂಚನೆ

ರಮೇಶ್ ಕೋಟ್ಯಾನ್, “ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ಪ್ರಮಾಣಪತ್ರ ತಯಾರಿಸಿ 6.5 ಎಕರೆ ದಲಿತರ ಜಾಗವನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಯಾವ ಕ್ರಮ?” ಎಂದು ಆರೋಪಿಸಿದರು. ಎಸ್‌ಪಿ, “ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.

ಫೈನಾನ್ಸ್ ಅಮಾಯಕರ ವಂಚನೆ

ದಲಿತ ಮುಖಂಡ ಶಿವಾನಂದ ಮೂಡಬೆಟ್ಟು, “ಮಂಗಳೂರಿನಿಂದ ಕಾರ್ಯಾಚರಿಸುವ ಫೈನಾನ್ಸ್ ಅಮಾಯಕರಿಗೆ 26 ಸಾವಿರ ರೂ. ಸಾಲ ನೀಡಿ ಲಕ್ಷಾಂತರ ವಸೂಲಿ ಮಾಡುತ್ತಿದ್ದಾರೆ. ಆಧಾರ್ ಕಾರ್ಡ್, ಸಹಿ ಪಡಿಸಿ ವಂಚನೆ. ಕಾನೂನು ಕ್ರಮ ಬೇಕು” ಎಂದು ಒತ್ತಾಯಿಸಿದರು.

ಗಾಂಧಿ ಭವನ ಅಭಿವೃದ್ಧಿ

ಜನಪರ ಹೋರಾಟಗಾರ ಜಯನ್ ಮಲ್ಪೆ, “ಬನ್ನಂಜೆಯ ಪಾಲುಬಿದ್ದ ಗಾಂಧಿ ಭವನವನ್ನು ದಲಿತರಿಗೆ ಬಿಟ್ಟುಕೊಡಬೇಕು, ಇತರ ಉದ್ದೇಶಕ್ಕೆ ಬಳಸಬೇಡ” ಎಂದು ಆಗ್ರಹಿಸಿದರು. ಎಸ್‌ಪಿ, “ಇದು ಪೊಲೀಸ್ ಕ್ಯಾಂಟಿನ್‌ಗಾಗಿ ಇತ್ತು, ಈಗ ಕೈಬಿಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಹೊಸ ಕಟ್ಟಡ ನಿರ್ಮಿಸಿ ದಲಿತರಿಗೆ ಸೌಲಭ್ಯ ಒದಗಿಸಲಿದೆ” ಎಂದು ತಿಳಿಸಿದರು.

ಬ್ರಹ್ಮಾವರ ಬಳಿ ವಿದ್ಯಾರ್ಥಿ ಸುರಕ್ಷತೆ

ದಸಂಸ ಮೈಸೂರು ವಿಭಾಗೀಯ ಸಂಚಾಲಕ ಶ್ಯಾಮ್ ರಾಜ್ ಬಿರ್ತಿ, “ಬ್ರಹ್ಮಾವರ ಮಹೇಶ್ ಆಸ್ಪತ್ರೆಯ ಎದುರಿನ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳಿಗೆ ಸಂಚಾರ ತೊಂದರೆ. ಬೆಳಿಗ್ಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು” ಎಂದು ಒತ್ತಾಯಿಸಿದರು.

ಸಭೆಯಲ್ಲಿ ದಸಂಸ ಮುಖಂಡರಾದ ಉದಯ್ ಕುಮಾರ್ ತಲ್ಲೂರು, ವಿಜಯಲಕ್ಷ್ಮೀ ವಾಸುದೇವ ಮುದೂರು, ಯುವರಾಜ್, ಗಣೇಶ್ ನೆರ್ಗಿ ಸಹ ಅಹವಾಲುಗಳನ್ನು ತಿಳಿಸಿದ್ದರು. ಸುಮಾರು 98 ಜನರು ಭಾಗವಹಿಸಿದ್ದು, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸುಧಾಕರ್ ಎಸ್. ನಾಯ್ಕ್, ಕಾರ್ಕಳ ಉಪವಿಭಾಗ ಸಹಾಯಕ ಪೊಲೀಸ್ ಅಧಿಕ್ಷಕಿ ಹರ್ಷ ಪ್ರಿಯಂವದಾ ಉಪಸ್ಥಿತರಿದ್ದರು.

ಈ ಲೇಖನವನ್ನು ಹಂಚಿಕೊಳ್ಳಿ