ಭಟ್ಕಳ, ಸೆಪ್ಟೆಂಬರ್ 07, 2025: ಭಟ್ಕಳದ ಹಳೆ ಬಸ್ ನಿಲ್ದಾಣ ಸಮೀಪ ಆಗಸ್ಟ್ 30, 2025ರಂದು ಅನಾರೋಗ್ಯದಿಂದ ಮೃತಪಟ್ಟ ಗುರುತು ತಿಳಿಯದ ಭಿಕ್ಷುಕನ ಅಂತ್ಯಸಂಸ್ಕಾರವನ್ನು ರುದ್ರ ಭೂಮಿಯಲ್ಲಿ ಭಾನುವಾರ ನೆರವೇರಿಸಲಾಯಿತು. ಪೊಲೀಸರು ಮತ್ತು ಸಮಾಜ ಸೇವಕರ ಸಹಕಾರದೊಂದಿಗೆ ಈ ಕಾರ್ಯ ನಡೆದಿದೆ.
ಮೃತ ಭಿಕ್ಷುಕನು ಆಗಸ್ಟ್ 30ರಂದು ಹಳೆ ಬಸ್ ನಿಲ್ದಾಣದ ಮೀನು ಮಾರುಕಟ್ಟೆ ಪಕ್ಕದ ಅಂಗಡಿಯ ಮುಂಭಾಗ ಕುಳಿತ ಸ್ಥಿತಿಯಲ್ಲಿಯೇ ಸಾವಿಗೀಡಾಗಿದ್ದ. ಮೃತದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಆತ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ. ಮೃತನ ವಾರಸುದಾರರನ್ನು ಪತ್ತೆಹಚ್ಚಲು ಬಜ್ಪೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದರೂ, ಸೆಪ್ಟೆಂಬರ್ 6ರವರೆಗೆ ಯಾರೂ ಮುಂದೆ ಬರದ ಕಾರಣ, ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯಸಂಸ್ಕಾರ ನಡೆಸಲಾಯಿತು.
ಅಂತ್ಯಕ್ರಿಯೆಯಲ್ಲಿ ಸಮಾಜ ಸೇವಕರಾದ ಮಂಜು ಮುಟ್ಟಳ್ಳಿ, ಇಸ್ಮಾಯಿಲ್ ಸವುದ್ ಗವಾಯಿ, ನಗರ ಪೊಲೀಸ್ ಠಾಣೆಯ ಎ.ಎಸ್.ಐ. ಅಂತೋನಿ ಫರ್ನಾಂಡಿಸ್, ಪೊಲೀಸ್ ಸಿಬ್ಬಂದಿ ಮಹೇಶ್ ಪಟಗಾರ್, ಆಂಬುಲೆನ್ಸ್ ಚಾಲಕ ಏವರೆಟ್ಸ್, ಮತ್ತು ಪುರಸಭೆಯ ಪೌರ ಕಾರ್ಮಿಕರು ಭಾಗವಹಿಸಿದ್ದರು. ಈ ಕಾರ್ಯಕ್ಕೆ ಭಟ್ಕಳ ನಗರ ಪೊಲೀಸ್ ಠಾಣೆಯವರು ಸಂಪೂರ್ಣ ಸಹಕಾರ ನೀಡಿದ್ದಾರೆ.