ಬೈಂದೂರು, ಸೆ.15, 2025: ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆಯಲ್ಲಿ ಶನಿವಾರ ತಡರಾತ್ರಿ ಮದ್ಯವ್ಯಸನಿಗಳಾದ ಗೆಳೆಯರ ನಡುವೆ ಗಲಾಟೆ ನಡೆದು, ಒಬ್ಬನನ್ನು ರಬ್ಬರ್ ಟ್ಯಾಪಿಂಗ್ ಚೂರಿಯಿಂದ ಇರಿದು ಕೊಲೆಗೈದ ಘಟನೆ ನಡೆದಿದೆ. ಕೊಲೆಯಾದವನನ್ನು ಕೇರಳ ಮೂಲದ ಬಿನೋ ಫಿಲಿಪ್ (45) ಎಂದು ಗುರುತಿಸಲಾಗಿದೆ.
ಬೈಂದೂರು ತಾಲೂಕಿನ ತೂದಳ್ಳಿ ದೇವರಗದ್ದೆ ನಿವಾಸಿ ಥೋಮಸ್ ಅವರ ತೋಟದಲ್ಲಿ ಕೇರಳ ಮೂಲದ ಬಿನೋ ಫಿಲಿಪ್ ಮತ್ತು ಉದಯ್ ಕಳೆದ ಎರಡು ವರ್ಷಗಳಿಂದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಮದ್ಯಪಾನದ ಸಂದರ್ಭಗಳಲ್ಲಿ ಆಗಾಗೆ ಗಲಾಟೆ ಮಾಡಿಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ. ಶನಿವಾರ ತಡರಾತ್ರಿಯೂ ಇಬ್ಬರ ನಡುವೆ ಗಲಾಟೆ ನಡೆದು, ಉದಯ್ ರಬ್ಬರ್ ಟ್ಯಾಪಿಂಗ್ ಚೂರಿಯಿಂದ ಬಿನೋಗೆ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಬಿನೋ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಮತ್ತು ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಉದಯ್ ಅವರನ್ನು ಬಂಧಿಸಿ, ಚೂರಿ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.