ಉಡುಪಿ: ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸಾಮಾಜಿಕ ಕಾರ್ಯಕರ್ತರಾದ ಪೀರು ಸಾಹೇಬ್ ಧ್ವಜಾರೋಹಣ ನಡೆಸಿ ಶುಭ ಹಾರೈಸಿದರು.
ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮುಹಮ್ಮದೀಯ ಎಜುಕೇಶನ್ ಟ್ರಸ್ಟ್’ನ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ, “ಈ ದೇಶವು ಸ್ವಾತಂತ್ರ್ಯಗೊಂಡು 79 ವರ್ಷ ಕಳೆದಿದೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ, ಗಡಿ, ಧರ್ಮ, ಭಾಷೆಯ ಬೇಧ ಮರೆತು ಸರ್ವರು ಒಗ್ಗಟ್ಟಾಗಿ ಹೋರಾಟ ನಡೆಸಿ ಬ್ರಿಟಿಷರ ಗುಲಾಮಗಿರಿಯಿಂದ ಸ್ವತಂತ್ರರಾದೆವು. ಆದರೆ ಇಂದು ಗಡಿ, ಭಾಷೆ, ಹಿಂದೂ-ಮುಸ್ಲಿಮ್ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿದ್ದು ಇದು ಆಘಾತಕಾರಿಯಾಗಿದೆ” ಎಂದರು.

“ಈ ದೇಶದಲ್ಲಿ ಇಂದು ಕೂಡ ಬಡತನದ ಕಾರಣ ಸರಿಯಾದ ಆಹಾರ, ಬಟ್ಟೆ, ಸೂರಿಲ್ಲದೆ ಬದುಕುತ್ತಿರುವುದನ್ನು ನೋಡಿದಾಗ ಆಡಳಿತ ವರ್ಗದ ಮೇಲೆ ಹಲವು ಪ್ರಶ್ನೆಗಳು ಸಹಜವಾಗಿ ಏಳುತ್ತದೆ. ಸರಕಾರವನ್ನು ಪ್ರಶ್ನಿಸಿದವರನ್ನು ಜೈಲಿನಲ್ಲಿ ಇಡಲಾಗಿದೆ. ಆಡಳಿತ ಸುಧಾರಣೆಗೆ, ಈ ದೇಶದ ಭವಿಷ್ಯದ ಹಿತದೃಷ್ಟಿಯಿಂದ ಮಾತನಾಡಿದವರನ್ನು ಬಂಧಿಸಿಡಲಾಗಿದೆ. ಇಂತಹ ವಿಷಮ ಪರಿಸ್ಥಿತಿಯಿಂದ ಹೊರಬಂದು ಸ್ವಾತಂತ್ರ್ಯ ನಿಜ ಆಶಯದಂತೆ ಮುನ್ನಡೆಯುವಂತಾಗಲಿ” ಎಂದು ಆಶಿಸಿದರು.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅತಿಥಿಗಳನ್ನು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಇದ್ರಿಸ್ ಹೂಡೆ, ಟ್ರಸ್ಠಿ ಉಮರ್ ಉಸ್ತಾದ್,ಸಂಸ್ಥೆಯ ಆಡಾಳಿತಾಧಿಕಾರಿಯಾದ ಅಸ್ಲಮ್ ಹೈಕಾಡಿ, ಅಕಾಡೆಮಿಕ್ ಮುಖ್ಯಸ್ಥರಾದ ಹಸೀಬ್ ತರಫ್ದಾರ್, ಇಸ್ಲಾಮಿಕ್ ಸ್ಟಡೀಸ್ ಮುಖ್ಯಸ್ಥ ಮೌಲನ ಶಹೀದ್ ನದ್ವಿ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಬೀನಾ, ಪಿಯುಸಿಯ ಪ್ರಾಂಶುಪಾಲರಾದ ದಿವ್ಯ ಪೈ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುನಂದಾ, ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಮುಖ್ಯೋಪಾಧ್ಯಾಯರಾದ ಯಾಸ್ಮೀನ್ , ಕಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಮುಖ್ಯೋಪಾಧ್ಯಾಯರಾದ ಸಾದಾತ್ ಹಾಗೂ ಶಿಕ್ಷಕರು, ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹನಿಯಾ ಮರ್ಯಮ್ ನಿರೂಪಿಸಿದರು. ವಿದ್ಯಾರ್ಥಿನಿ ಟಿ.ಎಚ್.ಮುಸ್ಕನ್ ಸ್ವಾಗತಿಸಿದರು. ಶಿಫಾ ಶೆರಿನ್ ಧನ್ಯವಾದವಿತ್ತರು.