ಶಂಕರನಾರಾಯಣ

ಶಂಕರನಾರಾಯಣ: ಗೋವು, ಎಮ್ಮೆ ಕಳ್ಳತನ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

ಶಂಕರನಾರಾಯಣ, ಆಗಸ್ಟ್ 22, 2025: ಗೋವು, ಎಮ್ಮೆ ಕಳ್ಳತನ ಮಾಡಿ ಮಾಂಸ ಮಾರಾಟಕ್ಕೆ ಸಾಗಾಟ ಮಾಡುತ್ತಿದ್ದ ಶಾಂತೇಶ, ಹಿನಾಯತ್, ಸುನೀಲ್, ಅರುಣ ಜಾವಳ್ಳಿಯನ್ನು ಪೊಲೀಸರು ಬಂಧಿಸಿದರು. 5 ಕೋಣಗಳು, 3 ಎಮ್ಮೆಗಳು, ಬೂಲೆರೋ ವಾಹನ, 3 ಮೊಬೈಲ್‌ಗಳು ವಶ; ಪ್ರಕರಣ ದಾಖಲು.

ಶಂಕರನಾರಾಯಣ: ಗೋವು, ಎಮ್ಮೆ ಕಳ್ಳತನ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

ಕುಂದಾಪುರ, ಆಗಸ್ಟ್ 22, 2025: ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಶಂಕರನಾರಾಯಣ-ಹಾಲಾಡಿ ರಸ್ತೆಯ ಜಂಕ್ಷನ್ ಸಮೀಪ, ಗೋವು ಮತ್ತು ಎಮ್ಮೆ ಕಳ್ಳತನ ಮಾಡಿ ಮಾಂಸ ಮಾರಾಟದ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಬಂಧಿಸಿದ್ದಾರೆ.

ಆರೋಪಿಗಳಾದ ಶಾಂತೇಶ ಚಂದ್ರಪ್ಪ ಜಾವಳ್ಳಿ, ಹಿನಾಯತ್ ನಾಸಿಪುಡಿ, ಸುನೀಲ್ ಲಕ್ಮ್ಮಪ್ಪ ಜಾವಳ್ಳಿ, ಮತ್ತು ಅರುಣ ಚಂದ್ರಪ್ಪ ಜಾವಳ್ಳಿ, ಹಾವೇರಿಯಿಂದ ಯಾವುದೇ ಪರವಾನಗಿಯಿಲ್ಲದೆ 3 ವರ್ಷದ ಕಪ್ಪು ಬಣ್ಣದ 5 ಗಂಡು ಕೋಣಗಳು ಮತ್ತು 4 ವರ್ಷದ 3 ಕಪ್ಪು ಎಮ್ಮೆಗಳನ್ನು ಕಳ್ಳತನ ಮಾಡಿ, ಮಹಿಂದ್ರಾ ಕಂಪನಿಯ ಬಿಳಿ ಬೂಲೆರೋ ಮ್ಯಾಕ್ಸ್ ಗೂಡ್ಸ್ ವಾಹನ (KA68-6605)ದಲ್ಲಿ ಮಂಗಳೂರಿನ ಕಡೆಗೆ ಸಾಗಾಟ ಮಾಡುತ್ತಿದ್ದರು. ಅರುಣ ಚಂದ್ರಪ್ಪ ಜಾವಳ್ಳಿಯ ಸೂಚನೆಯಂತೆ ಈ ಜಾನುವಾರುಗಳನ್ನು ವಧೆಗೆ ಮಾರಾಟ ಮಾಡುವ ಉದ್ದೇಶವಿತ್ತು.

ಪೊಲೀಸ್ ಉಪನಿರೀಕ್ಷಕ ಗಡ್ಡೇಕರ್ ನೇತೃತ್ವದಲ್ಲಿ, ಖಚಿತ ಮಾಹಿತಿಯ ಆಧಾರದ ಮೇಲೆ ಪಂಚರ ಸಮಕ್ಷಮದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, 5 ಗಂಡು ಕೋಣಗಳು (ಅಂದಾಜು ಮೌಲ್ಯ 50,000 ರೂ.) ಮತ್ತು 3 ಎಮ್ಮೆಗಳು (ಅಂದಾಜು ಮೌಲ್ಯ 30,000 ರೂ.) ಜೊತೆಗೆ ಬೂಲೆರೋ ವಾಹನ (ಅಂದಾಜು ಮೌಲ್ಯ 8,00,000 ರೂ.) ಹಾಗೂ ಒಟ್ಟು 3 ಮೊಬೈಲ್ ಫೋನ್‌ಗಳನ್ನು (2 ಒಪ್ಪೊ, 1 ರೆಡ್‌ಮಿ, ಒಟ್ಟು ಮೌಲ್ಯ 30,000 ರೂ.) ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2025ರಡಿ ಕರ್ನಾಟಕ ಗೋವು ಹತ್ಯೆ ನಿಷೇಧ ಕಾಯ್ದೆ 1964ರ ಕಲಂ 4, 5, 7, 12, ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಕಲಂ 11(1)(ಡಿ), ಭಾರತೀಯ ಮೋಟಾರು ವಾಹನ ಕಾಯ್ದೆ 1988ರ ಕಲಂ 66 ಜೊತೆಗೆ 192(ಎ), ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ